ಗೋಕಾಕ : ರೈತರ ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ರೈತರು ಟೋಲ್ ಫ್ರೀ ೧೯೬೨ ಕ್ಕೆ ಕರೆ ಮಾಡಿದಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ವಾಹನ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಮ್ಮ ಗೃಹ ಕಛೇರಿಯಲ್ಲಿ ಪಶು ಪಾಲನಾ ಇಲಾಖೆಯಿಂದ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಈ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸದ್ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.
ರಾಷ್ಟದಲ್ಲಿ ಮೊದಲ ಬಾರಿಗೆ ನಮ್ಮ ಬಿಜೆಪಿ ಸರ್ಕಾರ ಸಂಚಾರಿ ಪಶು ಚಿಕಿತ್ಸಾಲಯವನ್ನು ಪ್ರಾರಂಭಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದೆ. ಈ ವ್ಯವಸ್ಥೆಯಲ್ಲಿ ಪ್ರತ್ಯೇಕ ಕಾಲ್ ಸೆಂಟರ್ ತೆರೆಯಲಾಗಿದೆ ಎಂದು ಅವರು ಹೇಳಿದರು.
ಈ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕರು ಸೇವೆಯಲ್ಲಿದ್ದು ಇದರಿಂದ ರೈತರು ಸಾಕುವ ದನ ಕರುಗಳು, ಮೇಕೆ, ಹಂದಿ, ಕುರಿ ಸಹಿತ ಇತರೇ ಜಾನುವಾರುಗಳಿಗೆ ಅನಾರೋಗ್ಯ ಕಾಡಿದಾಗ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಔಷಧಗಳು, ಸಾಧನ ಸಲಕರಣೆಗಳಲ್ಲದೇ ಶಸ್ತç ಚಿಕಿತ್ಸಾ ವಾಹನಗಳನ್ನು ಒಳಗೊಂಡ ಪಶು ಸಂಜೀವಿನಿ ಯೋಜನೆಯ ಮುಂದುವರೆದ ಭಾಗವಾಗಿ ನಮ್ಮ ಸರ್ಕಾರ ಈ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆಯನ್ನು ಜಾರಿಗೊಳಿಸಿದೆ. ಮೂಡಲಗಿ ಮತ್ತು ಕೌಜಲಗಿಗೆ ಈ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಅನಾರೋಗ್ಯಕ್ಕೊಳಗಾಗುವ ಜಾನುವಾರುಗಳ ಸೇವೆಗೆ ಲಭ್ಯವಾಗಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ೨೦೨೧-೨೨ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ರೈತರಿಗೆ ಹೈನು ರಾಸು ಘಟಕ ಸ್ಥಾಪಿಸಲು ಒಟ್ಟು ೧೨ ಫಲಾನುಭವಿಗಳಿಗೆ ೧,೯೬,೩೩೦ ರೂ.ಗಳ ಸಹಾಯಧನದ ಚೆಕ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬಸಪ್ಪ ಸಂತಿ, ಹಳ್ಳೂರ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಢವಳೇಶ್ವರ ಗ್ರಾಪಂ ಅಧ್ಯಕ್ಷ ರಂಗಪ್ಪ ಕಳ್ಳಿಗುದ್ದಿ, ಅರಭಾವಿ ಪಿಕೆಪಿಎಸ್ ಅಧ್ಯಕ್ಷ ಹಣಮಂತ ಚಿಪ್ಪಲಕಟ್ಟಿ, ಪಪಂ ಸದಸ್ಯ ಅಡಿವೆಪ್ಪ ಬಿಲಕುಂದಿ, ಕೆಂಪಣ್ಣ ದಡ್ಡಗೋಳ, ಈರಣ್ಣ ಜಾಲಿಬೇರಿ, ಅಶೋಕ ಬಂಡಿವಡ್ಡರ, ವಿಠ್ಠಲ ಮೋಕಾಶಿ, ಭೀಮಶಿ ಅಂತರಗಟ್ಟಿ, ಮೂಡಲಗಿ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಎಂ.ವ್ಹಿ. ವಿಭೂತಿ, ಗೋಕಾಕ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ, ಮೂಡಲಗಿ ಸಹಾಯಕ ನಿರ್ದೇಶಕ ಡಾ.ನೀಲಕಂಠ ಕಪ್ಪಲಗುದ್ದಿ, ಗೋಕಾಕ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಶಶಿಕಾಂತ ಕೌಜಲಗಿ, ಬೆಟಗೇರಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಡಿ.ಕೆ. ಹೊಸಮನಿ ಹಾಗೂ ಮುಖಂಡರು ಉಪಸ್ಥಿತರಿದ್ದರು.
