ಮೂಡಲಗಿ : ಕೋವಿಡ್-19 ಎರಡನೇಯ ಅಲೆ ವ್ಯಾಪಕವಾಗಿ ಹರಡುತ್ತಿದೆ. 24 ಗಂಟೆಗಳು ಸತತವಾಗಿ ಆಕ್ಸಿಜೇನ್ ಪೂರೈಕೆಯಾಗುವಂತೆ ಸ್ಥಳೀಯವಾಗಿ ಸೋಂಕಿತರಿಗೆ ಪುನರಾರಂಭಿಸಲಾಗಿದೆ. ಮೂಡಲಗಿ ಹಾಗೂ ಸುತ್ತಮುತ್ತಲಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚಿಸಿದರು.
ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುನರಾರಂಭಿಸಿರುವ ಕೋವಿಡ್ ಕಾಳಜಿ ಕೇಂದ್ರದಲ್ಲಿ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿ ಮುಖಾಂತರ ಮಾತನಾಡಿದರು.
ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸಿರುವ ಕೋವಿಡ್ ಕಾಳಜಿ ಕೇಂದ್ರದಲ್ಲಿ ಸತತವಾಗಿ ಆಕ್ಸಿಜೇನ್ ಪೂರೈಕೆಯ 24 ಹಾಸಿಗೆಯುಳ್ಳ ಸಕಲ ಸೌಲಭ್ಯಗಳನ್ನೊಳಗೊಂಡ ಮಾದರಿ ಕೋವಿಡ್ ಕಾಳಜಿ ಕೇಂದ್ರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೊರೋನಾ ಸೋಂಕಿತ ಮೂಡಲಗಿ ಸುತ್ತಮುತ್ತಲಿನ ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆದು ಚೇತರಿಕೆಯಾಗಬೇಕು ಎಂದರು.
ವಿವಿಧ ಇಲಾಖೆಗಳಿಗೆ ಕಾರ್ಯಹಂಚಿಕೆಯನ್ನು ಮಾಡಿದರು. ಆರೋಗ್ಯ ಇಲಾಖೆಯಿಂದ ಸೋಂಕಿತರ ಹಿತದೃಷ್ಠಿಯಿಂದ ಅಗತ್ಯವಿದ್ದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳಿಂದ ಹೆಚ್ಚುವರಿ ಅಂಬುಲೆನ್ಸ, ವೈದ್ಯರು ಸಿಬ್ಬಂದಿ ಮೂರು ಪಾಳೆಯಲ್ಲಿ ಕರ್ತವ್ಯ ನಿರ್ವಹಣೆ, ಅಗತ್ಯ ಔಷಧೋಪಚಾರಗಳ ಸಂಗ್ರಹ ಹಾಗೂ ಆಸ್ಪತ್ರೆ, ಆವರಣ, ಕೋವಿಡ್ ಕಾಳಜಿ ಕೇಂದ್ರವನ್ನು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. ಪುರಸಭೆಯವರು ಕಾಲ ಕಾಲಕ್ಕೆ ಕುಡಿಯುವ ನೀರು, ಶೌಚಾಲಯ ಸ್ವಚ್ಚತೆ, ಕಾಳಜಿ ಕೇಂದ್ರ ಘನ ತ್ಯಾಜ್ಯ ವಿಲೇವಾರಿಯ ಜೊತೆಗೆ ಸ್ಯಾನಿಟೈಜರ್ ಮಾಡುವ ಮೂಲಕ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸೇವೆಯನ್ನು ನೀಡಬೇಕು ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಇಲಾಖೆಯವರು ಸೋಂಕಿತರಿಗೆ ಊಟೋಪಚಾರ ಹಾಗೂ ಮೇಲುಸ್ತುವಾರಿ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಪೋಲಿಸ್ ಇಲಾಖೆಯವರು ಓರ್ವ ಪೆದೆಯನ್ನು ಭದ್ರತೆ ದೃಷ್ಠಿಯಿಂದ ನಿಯಮಿಸಬೇಕು. ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯವರು, ಪಂಚಾಯತ ಮಟ್ಟದ ಹಾಗೂ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಕಮೀಟಿಗಳ ಮುಖಾಂತರ ಸಭೆಯನ್ನು ಕೋವಿಡ್ ನಿಯಮಾನುಸಾರ ಜರುಗಿಸ ಬೇಕು. ಸಮಿತಿಗಳು ಸಮನ್ವಯತೆಯಿಂದ ಜನರ ರಕ್ಷಣೆ, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವದರ ಬಗ್ಗೆ ಖಾತ್ರಿಪಡಿಸಿಕೊಳ್ಳುವದರ ಜೊತೆಗೆ ಅಗತ್ಯ ಜನ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಅನಗತ್ಯ ಓಡಾಟ ಮಾಡಬಾರದು, ಸಾಮಾಜಿಕ ಅಂತರ ,ಮಾಸ್ಕ್ ಧರಿಸುವ ಮುಖಾಂತರ ಮಹಾಮಾರಿ ಕರೋನಾ ಎಂಬ ಹೆಮ್ಮಾರಿಯನ್ನು ಹೆಮ್ಮೆಟ್ಟಿಸಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು.
ಸ್ಥಳೀಯವಾಗಿ ಸೋಂಕಿತರ ಸೇವೆ ಹಾಗೂ ಉಸ್ತುವಾರಿಯಾಗಿ ಖಾಸಗಿ ವೈದ್ಯರು ವೈದ್ಯಕೀಯ ಸಹಾಯ ಮಾಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟೀನ್, ತಜ್ಞ ವೈದ್ಯ ಡಾ. ಆರ್.ಎಸ್ ಬೆಣಚನಮರಡಿ, ಡಾ. ಭಾರತಿ ಕೋಣಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಒ ವಾಯ್. ಬಿ ಗುಜನಟ್ಟಿ, ದೀಪಕ ಹರ್ದಿ ಸಿಪಿಐ ಸತೀಶ ಕಣಮೇಶ್ವರ, ಪಿಎಸ್ಐ ಹಾಲಪ್ಪ ಬಾಲದಂಡಿ, ಡಾ. ತಿಮ್ಮಣ್ಣ ಗಿರಡ್ಡಿ, ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ, ಎಲ್.ಎಚ್ ಬೋವಿ, ತಾಪಂ ಸಹಾಯಕ ನಿರ್ದೇಶಕ ಎಸ್.ಎಚ್ ದೇಸಾಯಿ,ಪುರಸಭೆ ಮುಖ್ಯಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗ ಹಾಜರಿದ್ದರು.
![](https://sarvavani.com/wp-content/uploads/2021/04/28MDLG1-scaled-1.jpg)