ಮೂಡಲಗಿ: ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ ಕನ್ನಡ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದು ಪ್ರತಿಭೆಗೆ ಜಾತಿ ಬೇಧವಿಲ್ಲ ಕನ್ನಡ ಶಬ್ದಗಳಲ್ಲಿರುವ ಸಹಜನಾದವನ್ನು ಅರ್ಥಮಾಡಿಕೊಂಡ ಎಲ್ಲರಿಗೂ ಇಷ್ಟವಾಗುವಂತೆ ದೇವರ ನಾಮಗಳನ್ನು ರಚಿಸಬಲ್ಲ ಪ್ರತಿಭೆ ಕನಕದಾಸರಲ್ಲಿತ್ತು ಎಂದು ನ್ಯಾಯವಾದಿ ಪಿ.ಎಸ್.ಮಲ್ಲಾಪೂರ ಹೇಳಿದರು.
ಅವರು ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡುತ್ತಾ, ಕೈಯಲ್ಲಿ ತಾಳ ತಂಬೂರಿಗಳನ್ನು ಹಿಡಿದುಕೊಂಡು, ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಹರಿನಾಮ ಸಂಕೀರ್ತನೆಯನ್ನು ಹಾಡುತ್ತಾ, ಬೀದಿ ಬೀದಿಗಳಲ್ಲಿ ತಿರುಗಿ ಮನೆ ಮನೆಗೆ ಹೋಗಿ, ಜನರ ಮನಸ್ಸಿನಲ್ಲಿ ಸದ್ಭಾವ ಉಂಟು ಮಾಡಲು ಸಂಗೀತವು ಸೋಗಸಾದ ಮಾರ್ಗ ಎಂದು ಇವರು ಅರಿತಿದ್ದರು ಎಂದರು.
ಹಿರಿಯ ನ್ಯಾಯವಾದಿ ಆರ್.ಆರ್.ಭಾಗೋಜಿ ಮಾತನಾಡುತ್ತಾ, ಕೀರ್ತನ ಸಾಹಿತ್ಯವೆಂದರೆ ನೆನಪಾಗುವುದೇ ದಾಸರು, ದಾಸರೆಂದರೆ ನೆನಪಾಗುವುದೆ ಕನಕದಾಸರು ಮತ್ತು ಪುರಂದರದಾಸರು. ಇವರಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ವಾಯ್.ಅಡಿಹುಡಿ, ಸಹಕಾರ್ಯದರ್ಶಿ ಡಿ.ಎಸ್.ರೊಡ್ಡನವರ, ಹಿರಿಯ ವಕೀಲರಾದ ಎನ್.ಬಿ.ನೇಮಗೌಡರ, ಆರ್.ಬಿ.ಮಮದಾಪೂರ, ವಾಯ್.ಎಸ್.ಖಾನಟ್ಟಿ, ವಿ,ಕೆ,ಪಾಟೀಲ ಉಪಸ್ಥಿತರಿದ್ದರು.
