ಮೂಡಲಗಿ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ಓದಿ ಸಫಲರಾಗಬೇಕು ಎಂದು ಕಸಪಾ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.
ಪಟ್ಟಣದ ಕೆ.ಎಚ್.ಸೋನವಾಲ್ಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಹಾಗೂ ೮ನೇ ವರ್ಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭದ ಯುವ ಆವೃತ್ತಿ ವಿತರಿಸಿ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತಪ್ಪದೆ ಯುವ ಆವೃತ್ತಿ ಓದಿ ಹೆಚ್ಚಿನ ಜ್ಞಾನ ಸಂಪಾದನೆ ವೃದ್ದಿಸಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಮೊಬೈಲ್ ಆಟ ಬಿಟ್ಟು ಅಂಕಣದ ಆಟಕ್ಕಿಳಿದು ಸದೃಡರಾಗಬೇಕು ಎಂದರು.
ಶಾಲಾ ಹಿತೈಸಿ ಹಾಗೂ ಹಿರಿಯರು ಆದ ಸದಾಶಿವ ತಲಮಟ್ಟಿ ಮಾತನಾಡಿ, ಜೀವನದಲ್ಲಿ ಸಂಸ್ಕಾರ ಎನ್ನುವುದು ಬಹಳ ಮುಖ್ಯ. ಉತ್ತಮ ಸಂಸ್ಕಾರ, ಶಿಕ್ಷಣ ಮತ್ತು ಯೋಗಗಳನ್ನು ಅರಿತುಗೊಂಡಾಗಲೇ ಮಕ್ಕಳು ಉತ್ತಮ ನಾಗರಿಕರಗಲು ಸಾಧ್ಯ ಎಂದರು.
ಸಾಹಿತಿ ಬಾಲಶೇಖ ಬಂದಿ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ನಿರ್ದಿಷ್ಠ ಗುರಿ ಇಟ್ಟುಕೊಂಡು ಓದಿದರೆ ಗುರಿ ಮುಟ್ಟಲು ಸಾಧ್ಯ ಎಂದರು.
ಶಾಲಾ ಮುಖ್ಯೋಪಾದ್ಯಯ ಎಮ್ ಎಮ್ ದಬಾಡಿ ಅಧ್ಯಕ್ಷತೆ ವಹಿಸಿ, ದೈಹಿಕ ಶಿಕ್ಷಕ ಟಿ ಜಿ ಘಂಟಿ ಪ್ರಾಸ್ತಾವಿಕವಾಗಿ ಹಾಗೂ ಕಲಿಕಾ ಪ್ರಗತಿಯಲ್ಲಿ ಸಂಘಗಳ ಪಾತ್ರ ಕುರಿತು ಎ ಆರ್ ಕುರುಬರ ಮಾತನಾಡಿದರು.
ಶಾಲಾ ಭೂ ದಾನಿ, ಎಸ್ಡಿಎಮ್ಸಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಹಾಗೂ ಶಾಲೆಗೆ ನೀರು ಶುದ್ಧಿಕರಣ ಯಂತ್ರ ದೇಣಿಗೆ ನೀಡಿದ ಹಣಮಂತ ಪ್ಯಾಟಿಗೌಡರ, ವಿದ್ಯಾರ್ಥಿಗಳಿಗೆ ಕನ್ನಡಪ್ರಭದ ಯುವ ಆವೃತ್ತಿ ವಿತರಿಸಿದ ದಂತವೈದ್ಯ ಡಾ. ಸಂಜಯ ಶಿಂಧಿಹಟ್ಟಿ, ಸಾಹಿತಿ ಬಾಲಶೇಖರ ಬಂದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಇದೇ ವೇಳೆಯಲ್ಲಿ ಗಣ್ಯರು ಕನ್ನಡಪ್ರಭದ ಯುವ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಖಾ ಹಾದಿಮನಿ, ಪುರಸಭೆ ಸದಸ್ಯ ಗಫಾರ ಡಾಂಗೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಎಸ್ಡಿಎಮ್ಸಿ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಸದಸ್ಯರಾದ ಮಹಾದೇವಿ ಪಾರ್ಶಿ, ಮಹಾದೇವಿ ಗುಡದಾರ, ವಕೀಲ ಲಕ್ಷ್ಮಣ ಅಡಿಹುಡಿ, ಕೆ.ಎಸ್ ಹೊಸಟ್ಟಿ, ಸಂಗಮೇಶ ಕುಂಬಾರ ಹಾಗೂ ಪಟ್ಟಣದ ವಿವಿಧ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಎಸ್ ಎಮ್ ಶೆಟ್ಟರ ನಿರೂಪಿಸಿದರು, ಎಸ್ ಡಿ ಮಾದರ ಸ್ವಾಗತಿಸಿದರು, ಸಹ ಶಿಕ್ಷಕಿ ಜ್ಯೋತಿಲಕ್ಷ್ಮೀ ವಂದಿಸಿದರು.
Sarvavani Latest Kannada News