ಮಂಗಳವಾರ , ಏಪ್ರಿಲ್ 16 2024
kn
Breaking News

ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ : ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಅಖಂಡ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ 15 ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪೂರಕವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಅರಭಾವಿ ಪಟ್ಟಣದ ನಾಡಕಛೇರಿ ಬಳಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅನುದಾನದಡಿ ಮಂಜೂರಾದ 20.50 ಕೋಟಿ ರೂ. ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ ಬಾಲಕೀಯರ ವಸತಿ ಶಾಲೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ತಮ್ಮ ಅಧಿಕಾರವಧಿಯಲ್ಲಿ ಶಿಕ್ಷಣಕ್ಕೆ ನೀಡಿದಷ್ಟು ಪ್ರಾಶಸ್ತ್ಯ ಬೇರೆ ಯಾವುದಕ್ಕೂ ನೀಡಿಲ್ಲ. ಶಿಕ್ಷಣವೊಂದೇ ಸಮಾಜದ ಬದಲಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಿದರು.
ಅರಭಾವಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಬಾಲಕೀಯರ ವಸತಿ ಶಾಲೆಯ ನಿರ್ಮಾಣಕ್ಕೆ 10 ಎಕರೆ ನಿವೇಶನವನ್ನು ನೀಡಿದ್ದು, ಇದಕ್ಕಾಗಿ ಸುಮಾರು 20 ಕೋಟಿ ರೂ.ಗಳ ಅನುದಾನವನ್ನು ತೆಗೆದಿರಿಸಲಾಗಿದೆ. ಮುಂದಿನ 18 ತಿಂಗಳೊಳಗೆ ಈ ಕಾಮಗಾರಿ ಮುಗಿಯಲಿದ್ದು, ಈ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿ ವರೆಗಿನ 250 ಮಕ್ಕಳು ವ್ಯಾಸಂಗ ಮಾಡಲಿದ್ದಾರೆ ಎಂದು ಹೇಳಿದರು.
ಕಳೆದ 15 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ.ಗಳ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಬಡ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದೆ ಬಂದು ಸಮಾಜದಲ್ಲಿ ಉನ್ನತ ಸ್ಥಾನ ಲಭಿಸಬೇಕೆಂಬುದು ಮಹಾದಾಸೆಯಿಂದ ಅರಭಾವಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ರಂಗದ ಪ್ರಗತಿಗಾಗಿ ಇಲ್ಲಿಯವರೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮೂಡಲಗಿ ವಲಯವೂ ಕೂಡ ಶಿಕ್ಷಣದಲ್ಲಿ ಉತ್ತಮ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಅರಭಾವಿ ಪಟ್ಟಣ ಪಂಚಾಯತ ಅಧ್ಯಕ್ಷ ಲಕ್ಷ್ಮಣ ನಿಂಗನ್ನವರ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತೆಪ್ಪ ಝಲ್ಲಿ, ನಿಂಗಪ್ಪ ಈಳಿಗೇರ, ರಾಯಪ್ಪ ಬಂಡಿವಡ್ಡರ, ಭೀಮಪ್ಪ ಹಳ್ಳೂರ, ರಮೇಶ ಮಾದರ, ಸಾತಪ್ಪ ಜೈನ್, ಬಸವರಾಜ ಮಾಳೇದ, ಮಹಾಂತೇಶ ಸಗರಿ, ಉಪತಹಶೀಲ್ದಾರ ಎಲ್.ಎಚ್. ಭೋವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವ್ಹಿ. ಕಲ್ಲಪ್ಪನವರ, ಕವಶಿ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ವಸತಿ ಶಾಲೆಯ ಪ್ರಾಚಾರ್ಯ ಪಿ.ಎನ್. ಲಕ್ಕನಗೌಡರ, ಮುಖ್ಯಾಧಿಕಾರಿ ಕೆ.ಬಿ. ಬೆಣ್ಣಿ, ಪಟ್ಟಣ ಪಂಚಾಯತ ಸದಸ್ಯರು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page