ಗುರುವಾರ , ಮಾರ್ಚ್ 28 2024
kn
Breaking News

ವಿದ್ಯಾರ್ಥಿಗಳಲ್ಲಿ ನಿರಂತರ ಪ್ರಯತ್ನವಿದ್ದರೆ ಯಶಸ್ಸು ಬೆನ್ನಹಿಂದೆ ಬರುತ್ತದೆ : ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ

Spread the love

ಮೂಡಲಗಿ: ‘ವಿದ್ಯಾರ್ಥಿಗಳಲ್ಲಿ ಪ್ರಖರವಾದ ಗುರಿ, ಶ್ರದ್ಧೆ ಹಾಗೂ ನಿರಂತರವಾದ ಪ್ರಯತ್ನವಿದ್ದರೆ ಯಶಸ್ಸು ಬೆನ್ನಹಿಂದೆ ಬರುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ತಾಲ್ಲೂಕಿನ ನಾಗನೂರದ ಮೊರಾರ್ಜಿ ವಸತಿ ಶಾಲೆಯ ಸಭಾ ಭವನದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೦ಕ್ಕೂ ಅಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಕಲಿಕೆಗೆ ಇರುವ ಅವಕಾಶಗಳನ್ನು ಗಮನದಲ್ಲಿಟ್ಟು ಯಶಸ್ಸಿನತ್ತ ಸಾಗಬೇಕು ಎಂದರು.
ಪ್ರಸಕ್ತ ವರ್ಷದಲ್ಲಿ ಮೂಡಲಗಿ ವಲಯವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಶೇ. ೯೩.೭೦ ಪಡೆಯುವುದರ ಮೂಲಕ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ. ವಲಯದ ಎಲ್ಲ ಶಿಕ್ಷಕರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಪ್ರಯತ್ನ ಮುಖ್ಯವಾಗಿದೆ ಎಂದರು.
ಅನುರ್ತಿರ್ಣರಾಗಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಮತ್ತು ವಿಷಯದ ಕುರಿತು ಮಾರ್ಗದರ್ಶನ ಮಾಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮಾಡಬೇಕು. ಆ ಮೂಲಕ ಶಿಕ್ಷಣದ ಪ್ರಗತಿಯ ಸಮಗ್ರತೆ ಕಾಣಲು ಸಾಧ್ಯ ಎಂದರು.
ಮುಖ್ಯ ಅತಿಥಿ ಬಾಲಶೇಖರ ಬಂದಿ ಮಾತನಾಡಿ ಎಸ್‌ಎಸ್‌ಎಲ್‌ಸಿ ನಂತರ ಕಲಿಕೆಗೆ ಸಾಕಷ್ಟು ಅವಕಾಶಗಳು ಇವೆ. ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ವಿವಿಧ ಡಿಪ್ಲೋಮಾ ಕೋರ್ಸಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಸಾಧನೆಗೆ ಅವಕಾಶವಿದೆ. ಪ್ರತಿಭೆಯು ಯಾರು ಸ್ವತ್ತು ಆಗಿರುವುದಿಲ್ಲ. ಬಡವ, ಶ್ರೀಮಂತ, ಮೇಲು, ಕೀಳು ಎನ್ನುವ ತಾರತಮ್ಯವು ಪ್ರತಿಭೆಗೆ ಮಾನದಂಡವಾಗಬಾರದು ಎಂದರು.
ಮೂಡಲಗಿ ವಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಪರಂಪರೆಯು ಶ್ಲಾಘನೀಯವಾಗಿದೆ. ಇದು ಮಕ್ಕಳಿಗೆ ಸಾಧನೆಗೆ ಪ್ರೇರಣೆಯಾಗುತ್ತದೆ. ಬಿಇಒ ಅಜಿತ ಮನ್ನಿಕೇರಿ ಅವರದು ಮಾದರಿ ಕಾರ್ಯವಾಗಿದೆ ಎಂದರು.
ಬೆಳಗಾವಿಯ ಅಂಗಡಿ ಪೌಂಡೇಶನದ ಯೋಜನಾಧಿಕಾರಿ ಸಂಜೀವ ಮಾತನಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೌಂಡೇಶನದಿಂದ ಪಿಯುಸಿ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ರಾಘವೇಂದ್ರ ಗಂಗರಡ್ಡಿ, ಯಲ್ಲಪ್ಪ ಭಾವಮನಿ, ಕೌಜಲಗಿಯ ಸುಭಾಷ ವಲ್ಯಾಪುರ, ನಾಗನೂರದ ಕೆ.ಆರ್. ಮಾರಾಪುರ, ಸುಣಧೋಳಿಯ ಸುಭಾಷ ಭಾಗೋಜಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯರ್ಶಿ ಕೆ.ಆರ್. ಅಜ್ಜಪ್ಪನವರ, ಯಾದವಾಡದ ಜಿ.ಎಂ. ಸಕ್ರಿ ಇದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೪ ಅಂಕಗಳನ್ನು ಪಡೆದುಕೊಂಡಿರುವ ಅಡಿವೇಶ ಬಂಗಾರನವರ, ಲಕ್ಷ್ಮೀ ಚನ್ನಾಳ, ಮಹಾಲಕ್ಷ್ಮಿ ತಳವಾರ ಮತ್ತು ೬೨೩ ಅಂಕ ಪಡೆದ ಸರಸ್ವತಿ ಕೌಜಲಗಿ ತಮ್ಮ ಅನುಭವ ಹಂಚಿಕೊಂಡರು.
ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್. ಪ್ರಾಸ್ತಾವಿಕ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ೬೨೦ರಿಂದ ೬೨೪ ಅಂಕಗಳನ್ನು ಪಡೆದುಕೊಂಡಿರುವ ವಿವಿಧ ಪ್ರೌಢ ಶಾಲೆಗಳ ೪೮ ವಿದ್ಯಾಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ವಲಯ ವ್ಯಾಪ್ತಿಯ ೮೧ ಪ್ರೌಢ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page