ಶುಕ್ರವಾರ , ಮಾರ್ಚ್ 29 2024
kn
Breaking News

ಕಾಂಗ್ರೇಸ್ ಮುಳುಗುತ್ತಿರುವ ಹಡಗು. ಸಿದ್ಧು-ಡಿಕೆಶಿ ಕಾಂಗ್ರೇಸ್‌ನ್ನೇ ವಿನಾಶ ಮಾಡುತ್ತಿದ್ದಾರೆ : ಮಾಜಿ ಸಿಎಂ ಜಗದೀಶ ಶೆಟ್ಟರ

Spread the love

ಗೋಕಾಕ : ಕಾಂಗ್ರೇಸ್ ಪಕ್ಷ ಮುಳುಗುತ್ತಿರುವ ಹಡಗು. ಈಗಾಗಲೇ ದೇಶದಲ್ಲಿ ತನ್ನ ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಂಡಿರುವ ಈ ಪಕ್ಷಕ್ಕೆ ಅವರ ನಾಯಕರುಗಳೇ ಕೂಡಿಕೊಂಡು ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ಧು-ಡಿಕೆಶಿ ಸೇರಿಕೊಂಡು ಕಾಂಗ್ರೇಸ್‌ನ್ನು ನಾಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾರ‍್ಸ್ ಸಭಾ ಭವನದಲ್ಲಿ ಸೋಮವಾರದಂದು ಜರುಗಿದ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ಗೊತ್ತು-ಗುರಿಗಳಿಲ್ಲ. ಕೇವಲ ಸುಳ್ಳು ಪ್ರಚಾರ ಡಂಬಾಚಾರ ನಡೆಸುವುದೇ ಅದರ ಗುರಿಯಾಗಿದೆ ಎಂದು ಟೀಕಿಸಿದರು.

ಇದುವರೆಗೂ ವಿಧಾನ ಪರಿಷತ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿಕ್ಕೆ ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಸಿದ್ಧು-ಡಿಕೆಶಿ ಸೇರಿಕೊಂಡು ಪಕ್ಷವನ್ನು ಅವರೇ ನಿರ್ಣಾಮ ಮಾಡುತ್ತಾರೆ. ಈಗಾಗಲೇ ಪಂಜಾಬ್‌ನ ಸಿದ್ಧು ಜೈಲು ಸೇರಿದ್ದಾರೆ. ಇಲ್ಲಿ ಸಿದ್ಧು ಕಾಂಗ್ರೇಸ್‌ನ್ನು ಸಂಪೂರ್ಣ ನೆಲಕ್ಕುರುಳಿಸುತ್ತಾರೆಂದು ಅವರು ಹೇಳಿದರು.

ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಸುಮಾರು 150 ಸ್ಥಾನಗಳನ್ನು ಬಿಜೆಪಿ ಪಡೆದು ಅಧಿಕಾರಕ್ಕೆ ಮತ್ತೊಮ್ಮೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೂನ್ 13 ರಂದು ನಡೆಯುವ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುಮತವಿಲ್ಲ. ಈ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ. ಈಗಾಗಲೇ ಶಿಕ್ಷಕರ ಪ್ರತಿನಿಧಿಯಾಗಿ ಅರುಣ ಶಹಾಪೂರ ಹಾಗೂ ಪದವೀಧರ ಮತಕ್ಷೇತ್ರದಿಂದ ಹಣಮಂತ ನಿರಾಣಿ ಅವರು ಉತ್ತಮವಾಗಿ ವಿಧಾನ ಪರಿಷತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಹಾಗೂ ಪದವೀಧರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಈ ಚುನಾವಣೆಯಲ್ಲಿ ಇಬ್ಬರನ್ನು ಪ್ರಥಮ ಪ್ರಾಶಸ್ತö್ಯದ ಮೂಲಕ ಆಯ್ಕೆ ಮಾಡಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆಗೆ ಅನುವು ಮಾಡಿಕೊಡುವಂತೆ ಶೆಟ್ಟರ ಮನವಿ ಮಾಡಿಕೊಂಡರು.
ಕೋವಿಡ್‌ನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಪ್ರಧಾನಿಗಳಿಗೆ ಸಲ್ಲುತ್ತದೆ. ಇಡೀ ದೇಶದ ಜನತೆಗೆ ಉಚಿತವಾಗಿ ಲಸಿಕೆಗಳನ್ನು ನೀಡುವ ಮೂಲಕ ಭಾರತದಲ್ಲಿ ಕೋವಿಡ್ ನಿರ್ಮೂಲನೆಗೆ ಶ್ರಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಇಡೀ ಜಗತ್ತೇ ಮೆಚ್ಚಿದೆ. ದೂರ ದೃಷ್ಟಿಯ ನಾಯಕತ್ವದಿಂದಾಗಿ ಇಡೀ ಪ್ರಪಂಚವೇ ಭಾರತದತ್ತ ನೋಡುತ್ತಿದೆ. ಮೋದಿ ಅವರು ಜಗತ್ತಿನ ಬಲಾಢ್ಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬಿಜೆಪಿ ಬಲಾಢ್ಯವಾಗಿದ್ದು ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಗಳ ಪರ ದುಡಿಯಲಿದ್ದಾರೆ ಎಂದು ಹೇಳಿದ ಅವರು, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕೋರಿಕೆಯ ಮೇರೆಗೆ ಗೋಕಾಕದಿಂದ ಪ್ರಚಾರ ಸಭೆಯನ್ನು ಆರಂಭಿಸಿರುವುದಾಗಿ ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ತಲಾ 10 ಮತಗಳನ್ನು ಅಭ್ಯರ್ಥಿಗಳಿಗೆ ಹಾಕಿಸುವ ಮೂಲಕ ಕಾರ್ಯಕರ್ತರು ಈ ಚುನಾವಣೆಯಲ್ಲಿ ದುಡಿಯಬೇಕು. ಚುನಾವಣೆ ಬಂದಾಗ ಮಾತ್ರ ಕಾಂಗ್ರೇಸ್ ಪಕ್ಷ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿದೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಅವರು ಹೇಳಿದರು.
ಅರಣ್ಯ ಹಾಗೂ ಆಹಾರ ಸಚಿವ ಉಮೇಶ ಕತ್ತಿ ಮಾತನಾಡಿ, ಪ್ರಕಾಶ ಹುಕ್ಕೇರಿ ಶಿಕ್ಷಕರೂ ಅಲ್ಲ. ಪದವೀಧರರೂ ಅಲ್ಲ. ಕೇವಲ ಅಧಿಕಾರದ ದಾಹಕ್ಕಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಪ್ರತಿ ಚುನಾವಣೆಯನ್ನು ಪ್ರಕಾಶ ಹುಕ್ಕೇರಿ ಎದುರಿಸುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ಚುನಾವಣೆಯನ್ನು ಎದುರಿಸಿದ್ದಾರೆ. ಅಧಿಕಾರವೇ ಅವರಿಗೆ ಮುಖ್ಯವಾಗಿದೆ ಹೊರತು, ಶಿಕ್ಷಕರ ಧ್ವನಿಯಲ್ಲ. ಅರುಣ ಶಹಾಪೂರ ಹಾಗೂ ಹನಮಂತ ನಿರಾಣಿ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಮೇಲ್ಮನೆಗೆ ಕಳುಹಿಸುವ ಜವಾಬ್ದಾರಿ ನಿಮ್ಮದಾಗಿದೆ. ನಾನು, ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಈಗಲೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ವೈಮನಸ್ಸುಗಳಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಜಿಲ್ಲೆಯ ಎಲ್ಲ ಬಿಜೆಪಿ ನಾಯಕರುಗಳು ಒಂದಾಗಿ ದುಡಿಯುತ್ತೇವೆ ಎಂದು ಅವರು ಹೇಳಿದರು.

ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ವಿಧಾನ ಪರಿಷತ್ ಅಭ್ಯರ್ಥಿಗಳಾದ ಅರುಣ ಶಹಾಪೂರ ಮತ್ತು ಹಣಮಂತ ನಿರಾಣಿ ಅವರಿಗೆ ಅತ್ಯಧಿಕ ಮತಗಳನ್ನು ನೀಡಿ ಅವರನ್ನು ಗೆಲ್ಲಿಸುತ್ತೇವೆ. ನಾಳೆಯಿಂದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರ ಪಡೆಯನ್ನು ರಚಿಸಲಾಗುವುದು. ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಅಪಾರವಾಗಿದೆ. ಈಗಾಗಲೇ ಕಳೆದ 18 ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತö್ಯ ನೀಡುತ್ತಿದ್ದೇನೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಹಾದಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಒಂದಾಗಿ ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಪ ಸದಸ್ಯ ರವಿಕುಮಾರ ಮಾತನಾಡಿ, ಚುನಾವಣಾಧಿಕಾರಿಗಳು ನೀಡುವ ಪೆನ್ನಿನಿಂದಲೇ 1 ನ್ನು ಬರೆಯುವ ಮೂಲಕ ತಮ್ಮ ಪ್ರಥಮ ಪ್ರಾಶಸ್ತö್ಯದ ಮತವನ್ನು ಅಭ್ಯರ್ಥಿಗಳಿಗೆ ನೀಡಬೇಕು. ಬಿಜೆಪಿಗೆ ಶಿಕ್ಷಣ ಮತ್ತು ಪದವೀಧರರ ಜೊತೆ ಅವಿನಾಭಾವ ಸಂಬoಧವಿದೆ. ಶಿಕ್ಷಣ ಕ್ಷೇತ್ರದ ಸಮಗ್ರ ಪ್ರಗತಿಗೆ ಬಿಜೆಪಿ ದುಡಿಯುತ್ತಿದೆ. ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಶಿಕ್ಷಕರಿಗೆ ಯಾವುದೇ ರೀತಿಯ ಸಂಬoಧವಿಲ್ಲ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ಅದರಲ್ಲೂ ದೇಶದಲ್ಲಿಯೇ ಜಾರಿಗ ತಂದ ಕೀರ್ತಿ ಕರ್ನಾಟಕವೇ ಮೊದಲಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಸಂಸದರಾದ ಮಂಗಲ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಗೋಕಾಕ ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳಿ, ನಗರ ಘಟಕ ಬಿಜೆಪಿ ಅಧ್ಯಕ್ಷ ಭೀಮಶಿ ಭರಮನ್ನವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಾಯವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ, ವಾಯವ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರು ಇದೇ ಸಂದರ್ಭದಲ್ಲಿ ಮತಯಾಚಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಸ್ವಾಗತಿಸಿದರು. ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page