ಶುಕ್ರವಾರ , ಮಾರ್ಚ್ 29 2024
kn
Breaking News

ಪ್ರತಿ ಲೀ. ಹಾಲಿಗೆ ರೂ. ೩ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಬೆಂಗಳೂರು : ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ ೩೦ ರಷ್ಟು ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಂಗಳವಾರ ಸಂಜೆ ಸುದ್ಧಿ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಪ್ರತಿ ಲೀಟರ್ ಹಾಲಿಗೆ ಕನಿಷ್ಠ ೩ ರೂ.ಗಳನ್ನು ಹೆಚ್ಚಿಗೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಅವರು ಕೋರಿದ್ದಾರೆ.
ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರ ಮತ್ತು ಖಾಸಗಿ ಸಂಸ್ಥೆಗಳ ಹಾಲಿನ ಮಾರಾಟ ದರವನ್ನು ಈಗಾಗಲೇ ಹೆಚ್ಚಿಸಿದ್ದು, ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ ಲೀಟರ್‌ಗೆ ರೂ. ೮ ರಿಂದ ೧೦ ರೂ.ಗೆ ಹೆಚ್ಚಳವಾಗಿದೆ. ಹಾಲಿನ ಮಾರಾಟ ದರವು ಕನಿಷ್ಠ ಪ್ರತಿ ಲೀಟರ್‌ಗೆ ೩ ರೂ. ಹೆಚ್ಚಿಸಲು ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಳ ಮಾಡಲಿರುವ ೩ ರೂ.ಗಳಲ್ಲಿ ಕನಿಷ್ಠ ರೂ. ೨ ನ್ನು ಹಾಲು ಉತ್ಪಾದಕರಿಗೆ ಮತ್ತು ಉಳಿದ ೧ ರೂ.ನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಕೆಎಂಎಫ್ ಹಾಗೂ ರಾಜ್ಯದಲ್ಲಿರುವ ಎಲ್ಲ ೧೪ ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು ೨೦೧೯-೨೦ ರಲ್ಲಿ ೧೬,೪೪೦.೭೪ ಕೋಟಿ ರೂ. ಇದ್ದು, ಪ್ರಸಕ್ತ ಸಾಲಿಗೆ ೧೯,೭೩೨ ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ೨ ವರ್ಷಗಳ ಅವಧಿಯಲ್ಲಿ ಶೇ ೨೦ ರಷ್ಟು ವಹಿವಾಟು ಹೆಚ್ಚಳವಾಗಿದ್ದು, ೨೦೨೨-೨೩ನೇ ಸಾಲಿನಲ್ಲಿ ಒಟ್ಟಾರೆ ೨೫ ಸಾವಿರ ಕೋಟಿ ರೂ. ತಲುಪುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಕೆಎಂಎಫ್‌ನಿಂದ ನೀಡಲಾಗುತ್ತಿರುವ ಅನುದಾನವನ್ನು ೩.೫೦ ಲಕ್ಷ ರೂ.ಗಳಿಂದ ೫ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ೨೦೨೦-೨೧ನೇ ಸಾಲಿನಲ್ಲಿ ೨೫೦ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು ೧೦.೫೭ ಕೋಟಿ ರೂ. ಅನುದಾನ ನೀಡಲಾಗಿದ್ದು, ೨೦೨೧-೨೨ನೇ ಸಾಲಿನಲ್ಲಿ ೧೫.೧೫ ಕೋಟಿ ರೂ.ಗಳ ಅನುದಾನವನ್ನು ಇದಕ್ಕೆ ತೆಗೆದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಶು ಸಂಗೋಪನೆ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ೨೦೧೯-೨೦ ರಲ್ಲಿ ವಾರ್ಷಿಕವಾಗಿ ಕೆಎಂಎಫ್ ೪೦-೫೦ ಕೋಟಿ ರೂಪಾಯಿ ಈ ಯೋಜನೆಗಳಿಗೆ ನೀಡಲಾಗುತ್ತಿದ್ದು, ಮುಂದಿನ ಆಯವ್ಯಯದಲ್ಲಿ ೫೦ ಕೋಟಿ ರೂ. ನೀಡುತ್ತಿರುವುದನ್ನು ೮೦ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಮುಂದಿನ ೫ ವರ್ಷಗಳಲ್ಲಿ ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆ ರೂಪಿಸಿದ್ದು, ೨೦೨೬-೨೭ನೇ ಸಾಲಿಗೆ ೧೩೩.೮೪ ಲಕ್ಷ ಲೀಟರ್ ಹಾಲು ಶೇಖರಿಸುವ ಗುರಿಯನ್ನು ಹೊಂದಲಾಗಿದೆ. ಅದರಲ್ಲಿ ೧೧೦ ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನಗಳ ರೂಪದಲ್ಲಿ ಮತ್ತು ಉಳಿದ ಹಾಲನ್ನು ಹಾಲಿನ ಪುಡಿ ಪರಿವರ್ತನೆಗಾಗಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನೆರೆಯ ರಾಜ್ಯಗಳ ನಗರ ಪ್ರದೇಶಗಳಾದ ಚೆನ್ನೈ ಮುಂಬಯಿ, ಗೋವಾ, ಹೈದ್ರಾಬಾದ್, ಪುಣೆಗಳಲ್ಲಿ ಪ್ರತಿನಿತ್ಯ ನಂದಿನಿ ೧೦ ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಮಾರಾಟದ ಜಾಲವನ್ನು ಇನ್ನಷ್ಟು ವಿಸ್ತರಿಸುವ ಉದ್ಧೇಶದಿಂದ ಮಹಾರಾಷ್ಟçದ ವಿದರ್ಭ ಪ್ರಾಂತದಲ್ಲಿ ಹಾಲಿನ ಮಾರಾಟ ಪ್ರಾರಂಭಿಸಲಾಗಿದೆ. ಕೆಫೆ ಕಾಫೀ ಡೇ ಮಾದರಿಯಲ್ಲಿ ನಂದಿನಿ ಮಾದರಿಯಲ್ಲಿ ವಿನೂತನ ನಂದಿನಿ ಕೆಫೆ ಮೂ ಅನ್ನು ಈಗಾಗಲೇ ರಾಜ್ಯಾದ್ಯಂತ ಸ್ಥಾಪಿಸಲಾಗಿದೆ. ಮುಂದಿನ ವರ್ಷದಿಂದ ಬೇರೆ ಬೇರೆ ನಗರಗಳಲ್ಲಿ ೧೦೦ಕ್ಕೂ ಅಧಿಕ ವಿನೂತನ ನಂದಿನಿ ಕೆಫೆ ಮ್ಹೂ ಸ್ಥಾಪಿಸುವ ಗುರಿ ಹೊಂದಲಾಗಿದೆ. ಅಮೇರಿಕಾ, ಆಸ್ಟೇಲಿಯಾ, ಅಪಘಾನಿಸ್ಥಾನ, ಭೂತಾನ್, ಸಿಂಗಾಪೂರ, ಬಹರೆನ್ ಮುಂತಾದ ವಿವಿಧ ದೇಶಗಳಿಗೆ ೨೦ ಕೋಟಿ ಅಧಿಕ ಮೌಲ್ಯದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ. ೨೦೨೨-೨೩ ರಲ್ಲಿ ಒಟ್ಟು ೩೦೦ ಕೋಟಿ ರೂ. ಮೌಲ್ಯದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.
ಕೆಎಂಎಫ್ ನಿಂದ ಪೂರೈಸಲಾಗಿರುವ ಪಶು ಆಹಾರ ದರದಲ್ಲಿ ಪ್ರತಿ ಟನ್‌ಗೆ ರೂ. ೫೦೦ ರಿಂದ ೨೦೦೦ ರೂ.ಗಳವರೆಗೆ ವಿವಿಧ ಸಂದರ್ಭಗಳಲ್ಲಿ ರಿಯಾಯಿತಿ ನೀಡಲಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಒಟ್ಟು ೧೬೦ ಕೋಟಿ ರೂ.ಗಳಿಗಿಂತ ಹೆಚ್ಚಿನ ರಿಯಾಯಿತಿ ನೀಡಲಾಗಿದೆ. ಧಾರವಾಡ ಮತ್ತು ಗುಬ್ಬಿ ಪಶು ಆಹಾರ ಘಟಕಗಳಲ್ಲಿ ಆಹಾರ ಉತ್ಪಾದನಾ ಸಾಮರ್ಥ್ಯವನ್ನು ತಲಾ ೩೦೦ ಟನ್‌ನಂತೆ ಒಟ್ಟು ೬೦೦ ಟನ್ ಪ್ರತಿದಿನಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಕೆ.ಆರ್ ಪೇಟೆ, ಮಂಡ್ಯ, ಅರಕಲಗೂಡು, ಹಾಸನ ಜಿಲ್ಲೆಗಳಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಿ ಈಗಾಗಲೇ ಪ್ರತಿ ತಿಂಗಳಲ್ಲಿ ೪೫ ಸಾವಿರ ಟನ್ ಪೂರೈಕೆಯಾಗುತ್ತಿದ್ದ ಪಶು ಆಹಾರ ಪ್ರಮಾಣವನ್ನು ೬೫ ಸಾವಿರ ಟನ್‌ಗೆ ಹೆಚ್ಚಿಸಲಾಗಿದೆ. ಈ ಗುರಿಯನ್ನು ಮುಂದಿನ ಸಾಲಿಗೆ ೭೫ ಸಾವಿರ ಟನ್ ಗುಣಮಟ್ಟದ ಪಶು ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page